ಹೆದರಿದ್ದೀನಿ ದಯವಿಟ್ಟು ನನಗೆ ಸಹಕರಿಸಿ. ಏಳು ವರ್ಷಗಳ ನಂತರ ನಿಮ್ಮೆದುರು ಕಾಣಿಸಿಕೊಳ್ತಿದ್ದೀನಿ. ನಾನು ಸೋತಿರೋ ಮನುಷ್ಯ. ಆದ್ರೆ ನಾನು ಸತ್ತಿಲ್ಲ ಎಂದು ಈಗ ವಾಪಾಸ್ ಆಗಿರುವ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ನನ್ನಿಂದ ಎಷ್ಟೋ ಜನಕ್ಕೆ ತೊಂದರೆ ಆಗಿದೆ, ನೋವಾಗಿದೆ ಅವರಿಗೆ ಕ್ಷಮೆ ಕೇಳುತ್ತೀನಿ ಎಂದು ಹೇಳಿದ್ದಾರೆ. ನಾನು ಯಾರಿಗೂ ಉದ್ದೇಶ ಪೂರ್ವಕವಾಗಿ ಮೋಸ ಮಾಡಿಲ್ಲ. ನಾನು ಬೆಳಿಬೇಕು ಅನ್ನೋ ಆಸೆಯಲ್ಲಿ ಆ ತರ ಮೋಸ ಆಗಿದೆ. ಗೊತ್ತಾಗುವಷ್ಟರಲ್ಲಿ ನಾನು ಪ್ರಪಾತಕ್ಕೆ ಬಿದ್ದಿದ್ದೆ. ವಿಧಿ ಬೇರೆ ರೀತಿಯೇ ನನ್ನ ಜೀವನದಲ್ಲಿ ಆಟ ಆಡಿತು ಎಂದಿದ್ದಾರೆ.
‘ಮೊದಲಸಲ’ ಸಿನಿಮಾದಿಂದ ನನ್ನ ಸೋಲು ಆರಂಭ ಆಗಿತ್ತು. ಆದರೂ ನಿರಂತರ ಪ್ರಯತ್ನ ಮಾಡ್ತಿದ್ದೆ. ನಿರ್ದೇಶನ, ನಿರ್ಮಾಣ ಎಲ್ಲವನ್ನೂ ಮಾಡ್ತಿದ್ದೆ. ತೆಲುಗು ಸಿನಿಮಾಗಳನ್ನೂ ಡಿಸ್ಟ್ರಿಬ್ಯೂಷನ್ ಮಾಡಿದ್ದೆ ಅದೂ ಲಾಸ್ ಆಯ್ತು. 2018ರಲ್ಲಿ ನಾನು ಬೆಂಗಳೂರು ಬಿಟ್ಟಿದ್ದು. ಆಗ ನನ್ನ ವಿರುದ್ಧ ಏನೋನೋ ವಿಷ್ಯ ಹರಿದಾಡಿತ್ತು. ಆದ್ರೆ ನನ್ನ ಕೈಯಲ್ಲಿ ದುಡ್ಡು ಇರಲಿಲ್ಲ. ಯಾರಿಗೂ ಬಡ್ಡಿ ಕಟ್ಟೋಕೆ 15000 ಇಟ್ಟಿದ್ದೆ. ಅಷ್ಟೇ ಇದ್ದಿದ್ದು ನನ್ನ ಹತ್ತಿರ ಇತ್ತು.
ಶಿವಣ್ಣನ ವಾಲ್ಮೀಕಿ ಸಿನಿಮಾದಿಂದ ನಾನು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು. ತೂಗುದೀಪ ಶ್ರೀನಿವಾಸ್ ಪ್ರೊಡಕ್ಷನ್ ಒಳ್ಳೆಯ ಸಂಸ್ಥೆ. ನನ್ನ ಮಗನ ರೀತಿ ನೋಡಿಕೊಂಡಿದ್ರು. ದರ್ಶನ್ ನನ್ನ ಏಕವಚನದಲ್ಲಿ ಮಾತಾನಾಡಿದ್ದೇ ಇಲ್ಲ. ನನ್ನ ತಮ್ಮನ ರೀತಿ ನೋಡಿಕೊಂಡಿದ್ರು. ನನ್ನ ಹೆಂಡ್ತಿ ಮುಗ್ಧೆ. ನಾನು ಸಾಲ ಮಾಡಿದ್ದು ಅವಳಿಗೆ ಗೊತ್ತಿರಲಿಲ್ಲ. ಸುಮಾರು 8 ಕೋಟಿ ಸಾಲ ಮಾಡಿದ್ದೆ ಎಂದು ಹೇಳಿದ್ದಾರೆ.
