ಶಿವಮೊಗ್ಗದ ತ್ಯಾವರೆ ಕೊಪ್ಪದ ಸಿಂಹಧಾಮದಲ್ಲಿ ಭೀಕರ ಅವಘಡ ಸಂಭವಿಸಿದೆ. ನೀರಾನೆ ಚಿಕಿತ್ಸೆಗೆಂದು ತೆರಳಿದ್ದ ಪಶುವೈದ್ಯೆ ಡಾಕ್ಟರ್ ಸಮೀಕ್ಷಾ ರೆಡ್ಡಿ ಮೇಲೆಯೇ ನೀರಾನೆ ದಾಳಿ ಮಾಡಿದ್ದು ತೀವ್ರವಾಗಿ ಗಾಯಗೊಂಡಿದ್ದ ಡಾ.ಸಮೀಕ್ಷಾ ಸಾವನಪ್ಪಿದ್ದಾರೆ.
ತ್ಯಾವರೆ ಕೊಪ್ಪದ ಸಿಂಹದಾಮದಲ್ಲಿ ಒಟ್ಟು ಎರಡು ನೀರಾನೆಗಳಿದ್ದು ಅದರಲ್ಲಿ ಒಂದು ನೀರಾನೆ ಎಂಟು ತಿಂಗಳ ಗರ್ಭಿಣಿ. ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕುವ ಸಾಧ್ಯತೆ. ಈ ಹಿನ್ನಲೆಯಲ್ಲಿ ನಿನ್ನೆ (19;3;26) ತಡರಾತ್ರಿ 11:45ರ ಸುಮಾರಿಗೆ ಯುವ ಪಶುವೈದ್ಯೆ ಡಾಕ್ಟರ್ ಸಮೀಕ್ಷಾ ರೆಡ್ಡಿ ಚಿಕಿತ್ಸೆಗೆಂದು ತೆರಳಿದ್ದರು. ಆಗ ಈ ಅವಘಡ ಸಂಭವಿಸಿದೆ. ನೀರಾನೆ ದಿಡೀರನೆ ಡಾಕ್ಟರ್ ಸಮೀಕ್ಷಾ ರೆಡ್ಡಿ ಮೇಲೆ ದಾಳಿ ಮಾಡಿದೆ. ತೀವ್ರ ಸ್ವರೂಪದ ದಾಳಿಗೊಳಗಾಗಿದ್ದ ಸಮೀಕ್ಷಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸಾಮಾನ್ಯವಾಗಿ ವನ್ಯ ಜೀವಿಗಳಿಗೆ ಚಿಕಿತ್ಸೆ ನೀಡುವಾಗ ಅವು ಗರ್ಭದ ವ್ಯವಸ್ಥೆಯಲ್ಲಿ ಇರುವಾಗ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಎಸ್ಓಪಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಆದರೆ ಇದ್ಯಾವುದು ಇಲ್ಲಿ ನಡೆದಿಲ್ಲ.
SOP ನಿಯಮದಲ್ಲಿ ಏನಿದೆ?
1)ರಾತ್ರಿ ಹೊತ್ತು ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡಬಾರದು.
2)ಒಂದು ವೇಳೆ ನೀಡಿದರು ಕೂಡ ಅರವಳಿಕೆ ಚುಚ್ಚುಮದ್ದನ್ನು ನೀಡಿ ನೀಡಬೇಕು.
3)ಜೊತೆಗೆ ಒಂದಷ್ಟು ಜನ ಸಿಬ್ಬಂದಿಗಳು ಇರಬೇಕು.
4)ಪಟಾಕಿ ಇರಬೇಕು.
5)ಏರ್ ಫೈರ್ ಗನ್ ಇರಬೇಕು.
ಇದ್ಯಾವುದೂ ಇಲ್ಲದೆ ಇಲ್ಲಿ ಚಿಕಿತ್ಸೆ ನೀಡಲು ನೀರಾನೆ ಬಳಿ ಹೋಗಲಾಗಿದೆ. ಉಪ ಸಂರಕ್ಷಣಾ ಅಧಿಕಾರಿ ಅನುಮತಿ ತೆಗೆದುಕೊಂಡೆ ವೈದ್ಯರು ಈ ಕಾರ್ಯಾಚರಣೆಗೆ ಇಳಿಯಬೇಕು ಉಪ ಸಂರಕ್ಷಣಾ ಅಧಿಕಾರಿಗಳು ಈ ಯುವ ವೈದ್ಯೆ ಗೆ ಅನುಮತಿ ನೀಡಿದ್ದು ಏಕೆ..? ಎನ್ನುವ ಪ್ರಶ್ನೆ ಎದುರಾಗಿದೆ.
ಹಿಂದೆ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ನಾಲ್ಕು ತಿಂಗಳುಗಳು ಕಳೆದಿದೆ ಆದರೂ ಅವರನ್ನೇ ಇಟ್ಟುಕೊಂಡಿದ್ದಾರೆ ಜೊತೆಗೆ ನೀರಾನೆ ದಾಳಿಯಿಂದ ಮೃತಪಟ್ಟ ಯುವ ವೈದ್ಯೆ ಡಾಕ್ಟರ್ ಸಮೀಕ್ಷಾ ರೆಡ್ಡಿ ನೇಮಕವಾಗಿ ಕೇವಲ ಒಂದುವರೆ ತಿಂಗಳು ಕಳೆದಿದೆ ಈಕೆಗೆ ಯಾವ ಆದರದ ಮೇಲೆ ಚಿಕಿತ್ಸೆ ನೀಡಲು ಅನುಮತಿ ನೀಡಿದರು ಉಪ ಸಂರಕ್ಷಣಾಧಿಕಾರಿ. ಸಾಮಾನ್ಯವಾಗಿ ವನ್ಯ ಪ್ರಾಣಿಗಳನ್ನು ಚಿಕಿತ್ಸೆ ನೀಡುವ ಪೂರ್ವದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ವೈದ್ಯರು ಒಂದಷ್ಟು ಕಡೆ ಟ್ರೈನಿಂಗ್ ಕೂಡ ಪಡೆದುಕೊಂಡಿರಬೇಕು. ಪಡೆದಿಲ್ಲ ವೆಂದಾದರೆ ಈಕೆಗೆ ಅನುಮತಿ ನೀಡಿದ್ದು ಉಪ ಸಂರಕ್ಷಣಾ ಅಧಿಕಾರಿಯ ಕರ್ತವ್ಯ ಲೋಪವಲ್ಲವೇ..?! ಒಬ್ಬ ಹಿರಿಯ ವೈದ್ಯರ ಅನುಪಸ್ಥಿತಿಯಲ್ಲಿ ಯುವ ವೈದ್ಯೆ ಈ ಜವಾಬ್ದಾರಿ ನೀಡಿರುವುದು ಉಪ ಸಂರಕ್ಷಣಾ ಅಧಿಕಾರಿಯ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತದೆ.
ಉಪ ಸಂರಕ್ಷಣಾಧಿಕಾರಿ ಅಮರ್ ಅಕ್ಸರ್ ತ್ಯಾವರೆಕೊಪ್ಪದಲ್ಲಿರುವ ಸಿಂಹಧಾಮಕ್ಕೆ ಬಂದಮೇಲೆ ಸಾಕಷ್ಟು ಅವಘಡಗಳು ಸಂಭವಿಸಿವೆ. ಅರಣ್ಯ ಸಚಿವ ಈಶ್ವರ್ ಖಂಡ್ರೆಯವರೇ ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. ಈಗಷ್ಟೇ ಪದವಿ ಮುಗಿಸಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಲು ರೆಡಿಯಾಗಿದ್ದ ಯವ ವೈದ್ಯೆ ಸಮೀಕ್ಷಾ ರೆಡ್ಡಿ ಸಾವು ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳಿಗೆ ಪಾಠವಾಗಬೇಕು ಆ ದಿಕ್ಕಿನಲ್ಲಿ ಈಶ್ವರ ಖಂಡ್ರೆ ಅವರು ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.
